|
ಉಪಕರಣಇತರ ಭಾಷೆಗಳು
|
ಭೂಮಿ
ಭೂಮಿ - ಇದು ಸೂರ್ಯನ ಗ್ರಹಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹವಾಗಿದ್ದು, ಸೂರ್ಯನಿಂದ ೩ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ಅತಿ ದೊಡ್ಡ ಗ್ರಹವಾದ ಭೂಮಿಯು ಸೌರಮಂಡಲದಲ್ಲೇ ಅತಿ ದೊಡ್ಡ ಘನಾಕೃತಿಯಾಗಿದೆ. ಇದಲ್ಲದೆ, ಮಾನವರಿಗೆ ಈಗ ತಿಳಿದಿರುವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಜಂತುಗಳನ್ನು ಹೊಂದಿರುವ ಏಕೈಕ ಸ್ಥಳವೆಂದರೆ ಭೂಮಿ. ಇದು ಸೌರಮಂಡಲದಲ್ಲಿ ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ಗ್ರಹವೂ ಆಗಿದೆ. ಸಾಮಾನ್ಯವಾಗಿ ವೈಜ್ಞಾನಿಕ ಒಪ್ಪಿಗೆಯಲ್ಲಿರುವ ಪುರಾವೆಗಳ ಪ್ರಕಾರ, ಭೂಮಿಯು ೪೫೭ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು.[೧] ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರವು ಅದರ ಸ್ವಲ್ಪವೇ ನಂತರ, ಸುಮಾರು ೪೫೩ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು.
[ಬದಲಾಯಿಸಿ] ಪರಿಚಯಭೂಮಿಯ ಚಿಪ್ಪನ್ನು ಹಲವು ಭೂಫಲಕಗಳನ್ನಾಗಿ ವಿಂಗಡಿಸಲಾಗಿದೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಮೇಲ್ಮೈ ಮೇಲೆ ಚಲಿಸುತ್ತವೆ. ಭೂಮಿಯ ಒಳಭಾಗವು ಇನ್ನೂ ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಕವಚವು ದಪ್ಪನಾದ ಒಂದು ಘನರೂಪಿ ಸಂವಾಹಕದಿಂದ ಕೂಡಿದ್ದರೆ, ಭೂಗರ್ಭವು ಕಬ್ಬಿಣದಿಂದ ನಿರ್ಮಿತವಾಗಿದ್ದು, ಭೂಮಿಯ ಕಾಂತಕ್ಷೇತ್ರವನ್ನು ಉತ್ಪಾದಿಸುತ್ತದೆ. ಜೀವ ಜಂತುಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ. ಈ ಜೀವ ಜಂತುಗಳು ಉಂಟುಮಾಡುವ ಪರಿಸರ ಸಮತೋಲನವು ಭೂಮಿಯ ಮೇಲ್ಮೈಯನ್ನು ಬದಲಾಯಿಸುತ್ತದೆ. ಮೇಲ್ಮೈನ ಸುಮಾರು ೭೧% ಭಾಗವು ಉಪ್ಪು ನೀರಿನ ಸಾಗರಗಳಿಂದ ಆವೃತವಾಗಿದ್ದು, ಉಳಿದ ಮೇಲ್ಮೈಯು ಭೂಖಂಡಗಳು ಮತ್ತು ದ್ವೀಪಗಳಿಂದ ಸೇರಿದೆ. ಭೂಮಿ ಮತ್ತು ಅದರ ಸುತ್ತುಮುತ್ತಲಿನ ಅಂತರಿಕ್ಷದ ನಡುವೆ ಬಹಳಷ್ಟು ಒಡನಾಟಗಳು ಆಗುತ್ತವೆ. ಸ್ವಲ್ಪ ದೊಡ್ಡದೆಂದೇ ಹೇಳಬಹುದಾದ ಚಂದ್ರನ ಕಾರಣದಿಂದ ಸಾಗರಗಳಲ್ಲಿ ಉಬ್ಬರವಿಳಿತಗಳು ಉಂಟಾಗುತ್ತವೆ. ಹಲವಾರು ಕೋಟಿ ವರ್ಷಗಳ ಅವಧಿಯಲ್ಲಿ ಈ ಉಬ್ಬರವಿಳಿತಗಳು ಭೂಮಿಯ ಅಕ್ಷೀಯ ಪರಿಭ್ರಮಣ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸಿವೆ. ಭೂಮಿಯ ಇತಿಹಾಸದ ಮೊದಲ ಭಾಗದಲ್ಲಿ ಒಂದು ಧೂಮಕೇತುವಿನ ಅಪ್ಪಳಿಕೆಯಿಂದ ಸಾಗರಗಳು ಉದ್ಭವವಾದವು ಎಂದೆನ್ನಲಾಗಿದೆ. ನಂತರದ ಕ್ಷುದ್ರಗ್ರಹ ಅಪ್ಪಳಿಕೆಗಳು ಮೇಲ್ಮೈನ ಮೇಲೆ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡಿದ್ದಿರಬಹುದು. ಭೂಮಿಯ ಕಕ್ಷೆಯಲ್ಲಿನ ಬದಲಾವಣೆಗಳ ದೀರ್ಘಾವಧಿ ಅವರ್ತವೇ ಮೇಲ್ಮೈನ ಬಹಳಷ್ಟು ಭಾಗಗಳನ್ನು ಹಿಮದಲ್ಲಿ ಹೊದಿಸಿದ ಹಿಮಯುಗಗಳಿಗೂ ಕಾರಣವಾಗಿದ್ದಿರಬಹುದು. [ಬದಲಾಯಿಸಿ] ಇತಿಹಾಸಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ಪೂರ್ವಾಪರದ ವಿವರಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ೪೫೬.೭ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು ಸೌರ ಜ್ಯೋತಿಪಟಲದಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು. ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ ಚಂದ್ರನ ಉದ್ಭವವಾಯಿತು. ಇದು ಮಂಗಳ ಗ್ರಹದಷ್ಟು ಗಾತ್ರದ ಥೀಯ ಎಂಬ ಒಂದು ಕಾಯದಿಂದ ಆಗಿದ್ದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು ಅಗ್ನಿಪರ್ವತಗಳ ಚಟುವಟಿಕೆಗಳಿಂದ ಮುಂಚಿನ ವಾಯುಮಂಡಲದವು ಸೃಷ್ಟಿಯಾಯಿತು; ಧೂಮಕೇತುಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ ನೀರಾವಿಗಳಿಂದ, ಮೊದಲ ಸಾಗರಗಳು ರೂಪುಗೊಂಡವು.[೨] ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆಗಳಿಂದ, ಒಂದು ಸ್ವ-ಪ್ರತಿಕೃತಿಕರಿಸಿಕೊಳ್ಳುವ ಸಂಯುಕ್ತ ವಸ್ತು ಹೊರಬಂದಿತೆಂದು ನಂಬಲಾಗಿದೆ. ಇದಾದ ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಅವತರಿಸಿತು.[೩] ದ್ಯುತಿಸಂಶ್ಲೇಷಣೆಯಿಂದ ಸೂರ್ಯನ ಶಕ್ತಿಯ ನೇರ ಶೇಖರಣೆ ಮತ್ತು ಬಳಕೆಯು ಸಾಧ್ಯವಾಯಿತು; ಈ ಪ್ರಕ್ರಿಯೆಯಿಂದ ಹೊರಬಂದ ಆಮ್ಲಜನಕವು ವಾಯುಮಂಡಲದದಲ್ಲಿ ಶೇಖರವಾಗಿ ಓಜೋನ್ ಪದರವನ್ನು ನಿರ್ಮಿಸಿತು. ದೊಡ್ಡ ಕೋಶಗಳಲ್ಲಿ ಸಣ್ಣ ಕೋಶಗಳ ಸಂಘಟನೆಯು ಯೂಕ್ಯಾರಿಯೋಟ್ ಎಂದು ಕರೆಯಲಾಗುವ ಸಂಕೀರ್ಣ ಕೋಶಗಳ ಅಭಿವೃದ್ಧಿಗೆ ಎಡೆಮಾಡಿಕೊಟ್ಟಿತು. ಗುಂಪಾಗಿದ್ದ ಜೀವಕೋಶಗಳು ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ನೈಪುಣ್ಯತೆ ಹೊಂದುತ್ತಿದ್ದಂತೆ ನಿಜವಾದ ಬಹುಕೋಶ ಜೀವಿಗಳು ರೂಪುಗೊಂಡವು. ಅಪಾಯಕಾರಿ ಅತಿನೇರಳೆ ಕಿರಣಗಳನ್ನು ಓಜೋನ್ ಪದರವು ಹೀರಿಕೊಳ್ಳಲು ಶುರುಮಾಡಿದ ಮೇಲಂತೂ ಭೂಮಿಯ ಮೇಲೆ ಜೀವಿಗಳು ವ್ಯಾಪಕವಾಗಿ ಪಸರಿಸಿದವು. ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ, ಭೂಮಿಯ ನಿರಂತರ ಚಟುವಟಿಕೆಯ ಕಾರಣದಿಂದ, ಮೇಲ್ಮೈಯ ಮೇಲೆ ಭೂಖಂಡಗಳು ನಿರ್ಮಾಣಗೊಳ್ಳುತ್ತಾ, ಮತ್ತೆ ಮುರಿದುಕೊಳ್ಳುತ್ತಾ ಬಂದಿವೆ. ಮೇಲ್ಮೈಯ ಮೇಲೆ ನಿರಂತರವಾಗಿ ಚಲಿಸುವ ಈ ಭೂಫಲಕಗಳು ಒಮ್ಮೊಮ್ಮೆ ಒಗ್ಗೂಡಿ, ಬೃಹತ್ ಖಂಡಗಳೂ ಉಂಟಾಗಿವೆ. ಸುಮಾರು ೭೫ ಕೋಟಿ ವರ್ಷಗಳ ಹಿಂದೆ, ಈಗ ತಿಳಿದಂತೆ ಅತ್ಯಂತ ಹಳೆಯದಾದ ರೋಡಿನಿಯ ಬೃಹತ್ ಖಂಡವು ಮುರಿಯಲು ಶುರುವಾಯಿತು. ನಂತರ, ಸುಮಾರು ೬೦-೫೪ ಕೋಟಿವರ್ಷಗಳ ಹಿಂದೆ ಈ ತುಣುಕುಗಳು ಮತ್ತೆ ಒಗ್ಗೂಡಿ ಪ್ಯಾನೋಟಿಯ ಖಂಡವನ್ನು ನಿರ್ಮಿಸಿದವು. ಕೊನೆಯದಾಗಿ ನಿರ್ಮಾಣಗೊಂಡ ಪ್ಯಾಂಜೇಯ ಖಂಡವು ಸುಮಾರು ೧೮ ಕೋಟಿ ವರ್ಷಗಳ ಹಿಂದೆ ಮುರಿದು ಬೇರ್ಪಟ್ಟಿತು.[೪] ಸುಮಾರು ೭೫-೫೮ ಕೋಟಿ ವರ್ಷಗಳ ಹಿಂದೆ ತೀವ್ರವಾದ ಹಿಮನದಿಗಳ ಚಟುವಟಿಕೆಗಳು ಭೂಮಿಯ ಬಹುತೇಕ ಮೇಲ್ಮೈಯನ್ನು ಮಂಜಿನ ಪದರದಲ್ಲಿ ಹೊದೆಸಿದ್ದವು ಎಂದು ೧೯೬೦ರಿಂದೀಚೆಗೆ ಶಂಕಿಸಲಾಗಿದೆ. ಈ ವಾದವನ್ನು "ಹಿಮದ ಉಂಡೆ ಭೂಮಿ" ಎಂದು ಕರೆಯಲಾಗಿದೆ. ಬಹುಕೋಶ ಜೀವಿಗಳು ಹೇರಳವಾಗಿ ವಂಶಾಭಿವೃದ್ಧಿ ಮಾಡಿದ ಕೇಂಬ್ರಿಯನ್ ಸ್ಫೋಟದ ಸ್ವಲ್ಪವೇ ಮುನ್ನ ಈ ಹಿಮಯುಗವು ಆದದ್ದರಿಂದ ಇದರ ಬಗ್ಗೆ ಸಾಕಷ್ಟು ಆಸಕ್ತಿ ಇದೆ.[೫] ಸುಮಾರು ೫೩.೫ ಕೋಟಿ ವರ್ಷಗಳ ಹಿಂದೆ ನಡೆದ ಕೇಂಬ್ರಿಯನ್ ಸ್ಫೋಟದ ನಂತರ ಇದುವರೆಗೆ ಐದು ದೊಡ್ಡ ಅವನತಿಗಳು ನಡೆದಿವೆ.[೬] ಸುಮಾರು ೬.೫ ಕೋಟಿ ವರ್ಷಗಳ ಹಿಂದೆ ಆದ ಕೊನೆಯ ಅವನತಿಯು ಬಹುಶಃ ಒಂದು ಉಲ್ಕೆಯು ಭೂಮಿಯ ಮೇಲೆ ಅಪ್ಪಳಿಸಿದಾಗ ಉಂಟಾಯಿತು. ಈ ಅವನತಿಯಿಂದ (ಪಕ್ಷಿಗಳಲ್ಲದ) ಡೈನೊಸಾರ್ಗಳು ಮತ್ತಿತರ ದೊಡ್ಡ ಸರೀಸೃಪಗಳು ನಾಶವಾದರೂ, ಸಸ್ತನಿಗಳಂಥ ಚಿಕ್ಕ ಪುಟ್ಟ ಜೀವಿಗಳು ಉಳಿದುಕೊಂಡವು. ಕಳೆದ ೬.೫ ಕೋಟಿ ವರ್ಷಗಳಲ್ಲಿ ಸಸ್ತನಿಗಳು ಬಹಳಷ್ಟು ವೈವಿಧ್ಯಮಯವಾಗಿ ಬೆಳೆದಿವೆ. ಕೆಲವು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿನ ಒಂದು ಸಣ್ಣ ವಾನರವು ಎರಡು ಕಾಲುಗಳ ಮೇಲೆ ಎದ್ದು ನಿಂತುಕೊಳ್ಳಲು ಕಲಿತುಕೊಂಡಿತು. ಇದರಿಂದ ಉಪಕರಣಗಳ ಬಳಕೆಗೆ ಸಹಾಯವಾಯಿತು. ಇದಲ್ಲದೆ, ಸಂಪರ್ಕವು ಹೆಚ್ಚಾಗಿ, ದೊಡ್ಡ ಮೆದುಳಿನ ವಿಕಸಕ್ಕೆ ಬೇಕಾದ ಪ್ರಚೋದನೆ ಮತ್ತು ಪೌಷ್ಟಿಕಾಂಶಗಳನ್ನೂ ಒದಗಿಸಿತು. ಬೇಸಾಯ ಮತ್ತು ನಂತರದ ನಾಗರಿಕತೆಗಳ ಕಾರಣದಿಂದ, ಇಂದು ಮಾನವ ಸಮುದಾಯವು ಸ್ವಲ್ಪವೇ ಕಾಲದಲ್ಲಿ ಭೂಮಿಯ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ. [ಬದಲಾಯಿಸಿ] ರಚನೆ ಮತ್ತು ವಿನ್ಯಾಸ[ಬದಲಾಯಿಸಿ] ಆಕಾರಭೂಮಿಯ ಅಕಾರವು ಹ್ರಸ್ವಾಕ್ಷ ಗೋಳಕಲ್ಪಕ್ಕೆ ಬಹಳ ಹತ್ತಿರದಲ್ಲಿದೆ. ಆದರೆ, ಭೂಮಿಯ ನಿಖರ ಆಕಾರ (ಭೂಕಲ್ಪ) ಮತ್ತು ಈ ನಿರ್ದೇಶಕ ಗೋಳಕಲ್ಪಗಳ ನಡುವೆ ಸುಮಾರು ೧೦೦ ಮೀ.ಗಳವರೆಗೂ ವ್ಯತ್ಯಾಸವಿದೆ. ನಿರ್ದೇಶಕ ಗೋಳಕಲ್ಪದ ಸರಾಸರಿ ವ್ಯಾಸವು ಸುಮಾರು ೧೨,೭೪೨ ಕಿ.ಮೀ. ಗಳಷ್ಟಿವೆ. ಭೂಮಿಯ ಅಕ್ಷೀಯ ಪರಿಭ್ರಮಣೆಯ ಕಾರಣದಿಂದ ಸಮಭಾಜಕವು ಸ್ವಲ್ಪ ಉಬ್ಬುತ್ತದೆ. ಹೀಗಾಗಿ, ಧ್ರುವಗಳ ಮೂಲಕ ವ್ಯಾಸವು ಸಮಭಾಜಕದ ಮೂಲಕ ವ್ಯಾಸಕ್ಕಿಂತ ಸುಮಾರು ೪೩ ಕಿ.ಮೀ.ಯಷ್ಟು ಕಡಿಮೆಯಿರುತ್ತದೆ. ಭೂಮಿಯ ಮೇಲ್ಮೈನಲ್ಲಿ ಅತ್ಯಧಿಕ ಸ್ಥಳೀಯ ವಿಚಲತೆಗಳೆಂದರೆ ಮೌಂಟ್ ಎವರೆಸ್ಟ್ (ಸ್ಥಳೀಯ ಸಾಗರ ಮಟ್ಟಕ್ಕಿಂತ ೮,೮೫೦ ಮೀ. ಮೇಲೆ) ಮತ್ತು ಮರಿಯಾನ ಕಂದಕ (ಸ್ಥಳೀಯ ಸಾಗರ ಮಟ್ಟಕ್ಕಿಂತ ೧೦,೯೨೪ ಮೀ. ಕೆಳಗೆ). ಆದ್ದರಿಂದ, ಒಂದು ಪರಿಪೂರ್ಣ ದೀರ್ಘವೃತ್ತಜಕ್ಕೆ ಹೊಳಿಸಿದರೆ, ಭೂಮಿಯು ಸುಮಾರು ೦.೧೭% ಸಹಿಷ್ಣುತೆಯನ್ನು ಹೊಂದಿದೆ. ಹೋಲಿಕೆಯಲ್ಲಿ, ಬಿಲಿಯರ್ಡ್ ಚೆಂಡುಗಳು ೦.೨೨%ಗಿಂತ ಕಡಿಮೆ ಸಹಿಷ್ಣುತೆಯನ್ನು ಹೊಂದಿರುತ್ತವೆ. ಸಮಭಾಜಕದಲ್ಲಿ ಇರುವ ಉಬ್ಬಿನ ಕಾರಣದಿಂದಾಗಿ, ಭೂಮಿಯ ಕೇಂದ್ರದಿಂದ ಅತಿ ಹೆಚ್ಚು ದೂರದಲ್ಲಿರುವ ವೈಶಿಷ್ಟ್ಯವು ಎಕ್ವಡಾರ್ನಲ್ಲಿರುವ ಚಿಂಬೊರಾಜೋ ಪರ್ವತವಾಗಿದೆ. [ಬದಲಾಯಿಸಿ] ರಸಾಯನಿಕ ರಚನೆ
ಭೂಮಿಯ ದ್ರವ್ಯರಾಶಿಯು ಸುಮಾರು ೫.೯೮ × ೧೦೨೪ ಕಿ.ಗ್ರಾಮ್.ಗಳಷ್ಟಿದೆ. ಬಹುತೇಕವಾಗಿ ಇದು ಕಬ್ಬಿಣ (೩೫.೦%), ಆಮ್ಲಜನಕ (೨೮.೦%), ಸಿಲಿಕಾನ್ (೧೭.೦%), ಮೆಗ್ನೀಷಿಯಂ (೧೫.೭%), ನಿಕಲ್ (೧.೫%), ಕ್ಯಾಲ್ಷಿಯಂ (೧.೪%) ಮತ್ತು ಅಲ್ಯುಮಿನಿಯಮ್ (೧.೪%) ಮೂಲವಸ್ತುಗಳಿಂದ ಕೂಡಿದೆ[೭]. ಭೂಮಿಯ ಚಿಪ್ಪಿನ ಸಾಮಾನ್ಯ ಶಿಲಾ ಭಾಗಗಳೆಲ್ಲ ಬಹುತೇಕ ಆಕ್ಸೈಡುಗಳೆ; ಇದಕ್ಕೆ ಮುಖ್ಯ ಅಪವಾದವಾಗಿರುವ ಕ್ಲೋರಿನ್, ಗಂಧಕ ಮತ್ತು ಫ್ಲೋರಿನ್ಗಳು ಶಿಲೆಗಳಲ್ಲಿ ಒಟ್ಟಾರೆ ೧%ಗಿಂತ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ. ಭೂಮಿಯ ಮೇಲ್ಭಾಗದ ದ್ರವ್ಯರಾಶಿಯಲ್ಲಿ ೪೭%ಕ್ಕಿಂತ ಹೆಚ್ಚು ಆಮ್ಲಜನಕವೇ ಇದೆಯೆಂದು ಎಫ್. ಡಬ್ಲ್ಯು. ಕ್ಲಾರ್ಕ್ ಕಂಡುಹಿಡಿದಿದ್ದಾನೆ. ಆಮ್ಲಜನಕವು ಮುಖ್ಯವಾಗಿ ಆಕ್ಸೈಡುಗಳಲ್ಲಿ ಕಾಣುತ್ತದೆ. ಸಿಲಿಕಾ, ಅಲ್ಯುಮಿನ, ಕಬ್ಬಿಣದ ಆಕ್ಸೈಡುಗಳು, ಸುಣ್ಣ, ಮೆಗ್ನೀಷಿಯ, ಪೊಟಾಷ್ ಮತ್ತು ಸೋಡ, ಇವುಗಳು ಮುಖ್ಯವಾದ ಆಕ್ಸೈಡುಗಳು. ಸಿಲಿಕಾವು ಒಂದು ಆಮ್ಲದಂತೆ ಕೆಲಸಮಾಡಿ ಸಿಲಿಕೇಟ್ ಗಳನ್ನು ರೂಪಿಸುತ್ತದೆ. ಅಗ್ನಿಶಿಲೆಯಲ್ಲಿ ಸಾಮಾನ್ಯವಾಗಿ ದೊರಕುವ ಸುಮಾರೆಲ್ಲ ಖನಿಜಗಳು ಈ ರೀತಿಯವೆ. ೧೬೭೨ರಲ್ಲಿ ವಿವಿಧ ಶಿಲೆಗಳನ್ನು ವಿಶ್ಲೇಷಿಸಿ ಕ್ಲಾರ್ಕ್ನು ಮಾಡಿದ ಲೆಕ್ಕಾಚಾರದ ಪ್ರಕಾರ, ಸರಾಸರಿ ಖನಿಜಾಂಶಗಳು ಈ ರೀತಿ ಇವೆ: SiO2=೫೯.೭೧%, Al2O3=೧೫.೪೧%, CaO=೪.೯೦%, MgO=೪.೩೬%, Na2O=೩.೫೫%, FeO=೩.೫೨%, K2O=೨.೮೦%, Fe2O3=೨.೬೩%, H2O=೧.೫೨%, TiO2=೦.೬೦%, P2O5=೦.೨೨%. ಇವು ಒಟ್ಟಾರೆ ೯೯.೨೨% ನಷ್ಟು ಭಾಗವನ್ನು ಆಕ್ರಮಿಸುತ್ತವೆ (ಬಲಗಡೆಯಿರುವ ಕೋಷ್ಟಕವನ್ನು ನೋಡಿ). ಉಳಿದ ಖನಿಜಗಳು ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ.[೮] [ಬದಲಾಯಿಸಿ] ಆಂತರಿಕ ರಚನೆಬೇರೆ ಘನರೂಪಿ ಗ್ರಹಗಳಂತೆ, ಭೂಮಿಯ ಒಳಭಾಗವನ್ನು ರಸಾಯನಿಕ ದೃಷ್ಟಿಯಿಂದ ವಿವಿಧ ಪದರಗಳಲ್ಲಿ ವಿಂಗಡಿಸಬಹುದು. ಭೂಮಿಯು ಸಿಲಿಕೇಟ್ನ ಒಂದು ಘನರೂಪಿ ಹೊರ ಚಿಪ್ಪನ್ನು, ಬಹಳ ಸ್ನಿಗ್ಧವಾದ ಒಂದು ಕವಚವನ್ನು, ಕವಚಕ್ಕಿಂತ ಬಹಳ ಕಡಿಮೆ ಸ್ನಿಗ್ಧತೆಯನ್ನು ಹೊಂದಿರುವ ದ್ರವರೂಪಿ ಹೊರ ಭೂಗರ್ಭವನ್ನು, ಮತ್ತು ಘನರೂಪಿ ಒಳ ಭೂಗರ್ಭವನ್ನು ಹೊಂದಿದೆ. ಭೂಮಿಯ ಭೂವೈಜ್ಞಾನಿಕ ಪದರಗಳು[೯] ಮೇಲ್ಮೈನ ಕೆಳಗೆ ಈ ಕೆಳಗೆ ಸೂಚಿಸಿದ ಆಳದಲ್ಲಿವೆ:
ಗ್ರಹದ ಆಂತರಿಕ ಶಾಖವು ಬಹುಶಃ ಪೊಟಾಷಿಯಂ-೪೦, ಯುರೇನಿಯಂ-೨೩೮ ಮತ್ತು ಥೋರಿಯಂ-೨೩೨ ಸಮಸ್ಥಾನಿಗಳ ವಿಕಿರಣ ಕ್ಷಯದಿಂದ ಉಂಟಾಗುತ್ತದೆ. ಈ ಮೂರೂ ಧಾತುಗಳ ಅರ್ಧಾಯುಗಳು ೧೦೦ ಕೋಟಿ ವರ್ಷಗಳಿಗಿಂತ ಹೆಚ್ಚು.[೧೦] ಗ್ರಹದ ಮಧ್ಯದಲ್ಲಿ ತಾಪಮಾನವು ೭,೦೦೦ K ವರೆಗೆ ಮತ್ತು ಒತ್ತಡವು ೩೬೦ GPa ವರೆಗೆ ಇರಬಹುದು.[೧೧] ಭೂಗರ್ಭದ ಈ ಶಾಖದ ಒಂದು ಭಾಗವು ಕವಚದ ಗರಿಗಳಿಂದ ಚಿಪ್ಪಿನೆಡೆಗೆ ಸಾಗಿಸಲ್ಪಡುತ್ತದೆ; ಈ ಗರಿಗಳು ಹೆಚ್ಚು ತಾಪಮಾನ ಹೊಂದಿರುವ ಶಿಲಾದ್ರವದ ಸಂವಾಹಕ ಪ್ರವಾಹಗಳು. ಈ ಗರಿಗಳು ಶಾಖಕಲೆ ಮತ್ತು ಪ್ರವಾಹ ಕಪ್ಪುಶಿಲೆಗಳನ್ನು ಉಂಟುಮಾಡಬಲ್ಲವು.[೧೨] [ಬದಲಾಯಿಸಿ] ಭೂಫಲಕಗಳುಬಹುತೇಕ ವಿಜ್ಞಾನಿಗಳು ಒಪ್ಪಿಕೊಳ್ಳುವ ಫಲಕ ರಚನಾ ಶಾಸ್ತ್ರದ ಪ್ರಕಾರ, ಭೂಮಿಯ ಹೊರಭಾಗವು ಎರಡು ಪದರಗಳಿಂದ ಕೂಡಿದೆ: ಚಿಪ್ಪು ಮತ್ತು ಕವಚದ ಘನೀಕೃತ ಮೇಲ್ಭಾಗಗಳನ್ನು ಒಳಗೊಂಡ ಶಿಲಾಗೋಳ. ಶಿಲಾಗೋಳದ ಕೆಳಗಿರುವ ಅಸ್ಥೆನೋಗೋಳದಲ್ಲಿ ಕವಚದ ಸ್ನಿಗ್ಧ ಒಳಭಾಗವು ಸೇರಿದೆ. ಕವಚವು ಅತ್ಯಂತ ಬಿಸಿಯಾದ ಮತ್ತು ಅತಿ ಹೆಚ್ಚಿನ ಸ್ನಿಗ್ಧತೆಯನ್ನು ಹೊಂದಿದ ದ್ರವದಂತೆ ಕೆಲಸಮಾಡುತ್ತದೆ. ಅಸ್ಥೆನೋಗೋಳದ ಮೇಲೆ ತೇಲುವ ಶಿಲಾಗೋಳವು ಹಲವು ಭೂಫಲಕಗಳಿಂದ ಕೂಡಿದೆ. ಭೂಮಿಯ ಮೇಲ್ಮೈ ಮೇಲೆ ನಿರಂತರವಾಗಿ ಚಲಿಸುವ ಈ ಫಲಕಗಳ ತುದಿಗಳಲ್ಲಿ ಮೂರು ಬಗೆಗಳು ಇವೆ: ಅಭಿಸಾರೀ, ಅಪಸಾರೀ, ಮತ್ತು ಪರಿವರ್ತೀಯ. ಭೂಕಂಪನಗಳು, ಅಗ್ನಿಪರ್ವತಗಳು, ಪರ್ವತಗಳ ನಿರ್ಮಾಣ, ಮತ್ತು ಸಾಗರ ಕಂದಕಗಳು ಭೂಫಲಕಗಳ ತುದಿಗಳಲ್ಲಿ ಉಂಟಾಗುತ್ತವೆ. ಮುಖ್ಯ ಭೂಫಲಕಗಳು:
[ಬದಲಾಯಿಸಿ] ಮೇಲ್ಮೈಭೂಮಿಯ ಮೇಲ್ಮೈಯು ಸ್ಥಳದಿಂದ ಸ್ಥಳಕ್ಕೆ ವಿಪರೀತವಾದ ಭಿನ್ನತೆಗಳನ್ನು ಹೊಂದಿದೆ. ಸುಮಾರು ೭೦% ಮೇಲ್ಮೈಯು ನೀರಿನಿಂದ ಆವೃತವಾಗಿದ್ದು, ಭೂಖಂಡ ಚಾಚಿನ ಬಹುತೇಕ ಭಾಗವು ಸಾಗರದ ಮಟ್ಟದ ಕೆಳಗಿದೆ. ಭೂಮಿಯ ನೆಲವನ್ನೆಲ್ಲಾ ಒಂದೇ ಎತ್ತರದಲ್ಲಿ ಸಮನಾಗಿ ಹರಡಿದರೆ, ನೀರು ೨೫೦೦ ಮೀ. ಗಳಿಗಿಂತ ಹೆಚ್ಚು ಮಟ್ಟಕ್ಕೆ ಏರುತ್ತದೆ. ನೀರಿನಿಂದ ಆವೃತವಾಗಿರದ ಉಳಿದ ೩೦% ಮೇಲ್ಮೈಯು ಪರ್ವತಗಳು, ಮರುಭೂಮಿಗಳು, ಸಮತಳಗಳು, ಪ್ರಸ್ಥಭೂಮಿಗಳು, ಇತ್ಯಾದಿಗಳಿಂದ ಕೂಡಿದೆ. ಪ್ರಸ್ತುತದಲ್ಲಿ ಒಣನೆಲದ ೧೩.೩೧% ರಷ್ಟು ಮಾತ್ರ ಬೇಸಾಯಕ್ಕೆ ಯೋಗ್ಯವಾಗಿದೆ. ಆದರೆ, ೪.೭೧% ನೆಲದಲ್ಲಿ ಮಾತ್ರ ಶಾಶ್ವತ ಬೆಳೆಗಳನ್ನು ಬೆಳೆಯಬಹುದು.[೧೫] ಭೂಮಿಯ ನೆಲದ ಸುಮಾರು ೪೦% ಭಾಗವು ಪ್ರಸ್ತುತದಲ್ಲಿ ಬೇಸಾಯಕ್ಕೆ ಮತ್ತು ಮೇವಿಗಾಗಿ ಬಳಕೆಯಾಗುತ್ತಿದೆ. ಇದು ಸುಮಾರು ೩.೩ ೧೦೯ ಎಕರೆ ಬೇಸಾಯದ ಭೂಮಿ ಮತ್ತು ೮.೪ ೧೦೯ ಎಕರೆಗಳಷ್ಟು ಮೇವಿನ ಭೂಮಿ ಎಂದು ಅಂದಾಜು ಮಾಡಲಾಗಿದೆ.[೧೬] ಚಿತ್ರ:Earth elevation histogram.png
ಭೂ-ಮೇಲ್ಮೈಯ ಎತ್ತರವನ್ನು ತೋರಿಸುವ ಆಯತ ಚಿತ್ರ - ಭೂಮಿಯ ಮೇಲ್ಮೈಯ ಸುಮಾರು ೭೧% ಭಾಗವು ನೀರಿನಿಂದ ಕೂಡಿದೆ.
[ಬದಲಾಯಿಸಿ] ವೈಪರೀತ್ಯ ಬಿಂದುಗಳುಎತ್ತರದ ವೈಪರೀತ್ಯಗಳು: (ಸಾಗರ ಮಟ್ಟಕ್ಕೆ ಸಾಪೇಕ್ಷವಾಗಿ ಮಾಪಿಸಿದಂತೆ)
[ಬದಲಾಯಿಸಿ] ಕ್ಷಿತಿಗೋಳಭೂಮಿಯ ಹೊರ ಪದರವಾದ ಕ್ಷಿತಿಗೋಳವು ಮಣ್ಣಿನಿಂದ ರಚಿತವಾಗಿದ್ದು, ಮಣ್ಣನ್ನು ರೂಪಿಸುವ ಪ್ರಕ್ರಿಯೆಗಳು ಇಲ್ಲಿ ನಡೆಯುತ್ತವೆ. ಭೂಮಿಯ ಶಿಲಾಗೋಳ, ವಾಯುಮಂಡಲ, ಜಲಗೋಳ ಮತ್ತು ಜೈವಗೋಳಗಳ ಸೀಮೆಗಳಲ್ಲಿ ಕ್ಷಿತಿಗೋಳವು ಸ್ಥಿತವಾಗಿರುತ್ತದೆ. [ಬದಲಾಯಿಸಿ] ಜಲಗೋಳಭೂಮಿಯ ಮೇಲೆ ನೀರಿನ ಹೇರಳತೆಯು ಈ ನಮ್ಮ "ನೀಲ ಗ್ರಹ"ವನ್ನು ಸೌರಮಂಡಲದ ಬೇರೆಲ್ಲಾ ಗ್ರಹಗಳಿಂದ ಪ್ರತ್ಯೇಕಿಸುತ್ತದೆ. ಸುಮಾರು ೭೦.೮% ಮೇಲ್ಮೈಯು ನೀರಿನಿಂದಾವೃತವಾಗಿದ್ದು, ೨೯.೨% ವಿಸ್ತೀರ್ಣವು ಮಾತ್ರ ಸ್ಥಿರ ನೆಲವಾಗಿದೆ. ಭೂಮಿಯ ಜಲಗೋಳವು ಮುಖ್ಯವಾಗಿ ಸಾಗರಗಳಿಂದ ಕೂಡಿದ್ದರೂ, ಸರೋವರಗಳು, ಕೆರೆ-ನದಿಗಳು ಮತ್ತು ಭೂಗತ ನೀರು ಸಹ ಇದರಲ್ಲಿ ಸೇರಿವೆ. ಸಾಗರಗಳ ಸರಾಸರಿ ಆಳವು ೩,೭೯೪ ಮೀ. (೧೨,೪೪೭ ಅಡಿ)ಗಳಷ್ಟಿದ್ದು, ಭೂಖಂಡಗಳ ಸರಾಸರಿ ಎತ್ತರಕ್ಕಿಂತ ಐದು ಪಟ್ಟು ಇದೆ. ಸಾಗರಗಳ ದ್ರವ್ಯರಾಶಿಯು ಸುಮಾರು ೧.೩೫ ೧೦^೧೮ ಟನ್ನುಗಳು, ಅಥವಾ, ಭೂಮಿಯ ಒಟ್ಟು ದ್ರವ್ಯರಾಶಿಯ ೧/೪೪೦೦ ಭಾಗ. [ಬದಲಾಯಿಸಿ] ವಾಯುಮಂಡಲಭೂಮಿಯ ವಾಯುಮಂಡಲವು ಸ್ಫುಟವಾದ ಮಿತಿರೇಖೆಯನ್ನು ಹೊಂದಿಲ್ಲ. ಬದಲಿಗೆ, ಮೇಲ್ಮೈಯಿಂದ ಹೆಚ್ಚು ಮೇಲೆ ಮೇಲೆ ಹೋಗುತ್ತಿದ್ದಂತೆ, ವಾಯುಮಂಡಲವು ನಿಧಾನವಾಗಿ ವಿರಳವಾಗುತ್ತಾ, ಕೊನೆಗೆ ಅಂತರಿಕ್ಷದ ನಿರ್ವಾತದಲ್ಲಿ ಬೆರೆತುಹೋಗುತ್ತದೆ. ವಾಯುಮಂಡಲದ ಮುಕ್ಕಾಲು ಪಾಲು ದ್ರವ್ಯರಾಶಿಯು ಮೇಲ್ಮೈಯಿಂದ ಮೊದಲ ೧೧ಕಿ.ಮೀ.ಗಳ ಅಂತರದಲ್ಲಿದೆ. ಈ ಕೆಳಗಿನ ಪದರವನ್ನು ಹವಾಗೋಳವೆಂದು ಕರೆಯಲಾಗುತ್ತದೆ. ಇದರ ಮೇಲಿನ ವಾಯುಮಂಡಲವನ್ನು ಸ್ತರಗೋಳ, ಮಧ್ಯಮಂಡಲ, ಮತ್ತು ಉಷ್ಣಗೋಳಗಳಾಗಿ ವಿಂಗಡಿಸಲಾಗಿದೆ. ಇವುಗಳ ಆಚೆಯಿರುವ ಬಹಿರ್ಗೋಳವು ಕ್ರಮೇಣವಾಗಿ ಭೂಮಿಯ ಕಾಂತಗೋಳದೊಂದಿಗೆ ಬೆರೆಯುತ್ತದೆ (ಇಲ್ಲಿ ಭೂಮಿಯ ಕಾಂತಕ್ಷೇತ್ರವು ಸೌರ ಮಾರುತದೊಂದಿಗೆ ಒಡನಾಡುತ್ತದೆ). ವಾಯುಮಂಡಲದ ಒಂದು ಭಾಗವಾದ ಓಜೋನ್ ಪದರವು ಭೂಮಿಯ ಜೀವಿಗಳಿಗೆ ಒಂದು ಮುಖ್ಯವಾದ ಅವಶ್ಯಕ ಭಾಗ. ಭೂಮಿಯ ಮೇಲ್ಮೈಯಲ್ಲಿ ವಾಯು ಭಾರವು ಸರಾಸರಿ ೧೦೧.೩೨೫ kPa ಗಳಷ್ಟಿರುತ್ತದೆ. ವಾಯುವು ೭೮% ಸಾರಜನಕ ಮತ್ತು ೨೧% ಆಮ್ಲಜನಕಗಳಿಂದ ಕೂಡಿದ್ದು, ಅತ್ಯಲ್ಪ ಪ್ರಮಾಣದಲ್ಲಿ ನೀರಾವಿ ಮತ್ತಿತರ ಅನಿಲರೂಪಿ ಸಂಯುಕ್ತ ವಸ್ತುಗಳನ್ನು ಹೊಂದಿದೆ. ವಾಯುಮಂಡಲವು ಹಾನಿಕಾರಕ ಅತಿನೇರಳೆ ಕಿರಣಗಳನ್ನು ಹೀರಿಕೊಂಡು, ಉಷ್ಣತೆಯನ್ನು ಮಂದಿಸಿ, ನೀರಾವಿಯನ್ನು ಸಾಗಿಸಿ, ಉಪಯುಕ್ತ ಅನಿಲಗಳನ್ನು ಒದಗಿಸಿ, ಭೂಮಿಯ ಜೀವಜಂತುಗಳನ್ನು ರಕ್ಷಿಸುತ್ತದೆ. ಹವಾಮಾನವನ್ನು ನಿರ್ಧರಿಸುವುದರಲ್ಲಿ ವಾಯುಮಂಡಲವು ಒಂದು ಪ್ರಮುಖ ಅಂಗ. ಜಲಜನಕದ ಅಣುಗಳು ತುಂಬಾ ಹಗುರವಾಗಿದ್ದು, ಭೂಮಿಯ ಸರಾಸರಿ ತಾಪಮಾನದಲ್ಲಿ ಇವು ಮುಕ್ತಿ ವೇಗವನ್ನು ತಲುಪುವುದರಿಂದ, ಭೂಮಿಯ ಮೇಲೆ ಶುದ್ಧ ಜಲಜನಕವು ಮೂಲರೂಪದಲ್ಲಿ ಸಿಗುವುದಿಲ್ಲ. ಹೀಗಾಗಿ, ಭೂಮಿಯ ಪರಿಸರವು ರಾಸಾಯನಿಕವಾಗಿ ಉತ್ಕರ್ಷದಾಯಕವಾಗಿದೆ. ಭೂಮಿಯ ಜೀವಜಂತುಗಳ ರಾಸಾಯನಿಕ ರಚನೆಗೆ ಇದೇ ಕಾರಣ. [ಬದಲಾಯಿಸಿ] ಹವಾಮಾನಭೂಮಿಯ ಹವಾಮಾನದಲ್ಲಿ ಎದ್ದು ಕಾಣುವ ವೈಶಿಷ್ಟ್ಯಗಳೆಂದರೆ, ಎರಡು ಧ್ರುವ ವಲಯಗಳು, ಎರಡು ಸಮಶೀತೋಷ್ಣ ವಲಯಗಳು, ಮತ್ತು ಒಂದು ಅಗಲವಾದ ಸಮಭಾಜಕ ವಲಯ. ಮಳೆ ಮತ್ತು ಹಿಮಪಾತಗಳು ಬಹಳಷ್ಟು ವಿಭಿನ್ನವಾಗಿ, ವರ್ಷಕ್ಕೆ ಹಲವು ಮೀಟರ್ ನೀರಿನಿಂದ ಹಿಡಿದು, ಒಂದು ಮಿ.ಮೀ. ಗಿಂದ ಕಡಿಮೆಯಷ್ಟು ಬೀಳುತ್ತವೆ. ಸಾಗರ ಪ್ರವಾಹಗಳು ಹವಾಮಾನದ ಮೇಲೆ ಆಳವಾದ ಪ್ರಭಾವವನ್ನು ಬೀಳುತ್ತವೆ. ವಿಶಿಷ್ಟವಾಗಿ, ಅದ್ಭುತವಾದ ಲವಣೋಷ್ಣ ಪರಿಚಲನೆಯು ಅಪಾರವಾದ ಶಾಖವನ್ನು ಭೂಮಧ್ಯರೇಖೆಯ ವಲಯದಿಂದ ಧ್ರುವವಲಯಗಳ ಬಳಿಗೆ ಪಸರಿಸುತ್ತದೆ. [ಬದಲಾಯಿಸಿ] ಕಾಂತಕ್ಷೇತ್ರಭೂಮಿಯ ಕಾಂತಕ್ಷೇತ್ರವು ಸುಮಾರು ಕಾಂತೀಯ ದ್ವಿಧ್ರುವದ ಆಕಾರವನ್ನು ಹೊಂದಿದ್ದು, ಪ್ರಸ್ತುತದಲ್ಲಿ ಕಾಂತ ಧ್ರುವಗಳು ಗ್ರಹದ ಭೌಗೋಳಿಕ ಧ್ರುವಗಳ ಸಮೀಪದಲ್ಲಿವೆ. ಡೈನಮೊ ಸಿದ್ಧಾಂತದ ಪ್ರಕಾರ, ದ್ರವೀಕೃತ ಹೊರ ಭೂಗರ್ಭದ ವಲಯದಲ್ಲಿ ಶಾಖವು ವಾಹಕ ಪದಾರ್ಥಗಳಲ್ಲಿ ಸಂವಹನ ಚಲನೆಗಳನ್ನುಂಟುಮಾಡಿ, ಇದರಿಂದ ವಿದ್ಯುತ್ ಪ್ರವಾಹಗಳು ಸೃಷ್ಟಿಯಾಗುತ್ತವೆ. ಈ ವಿದ್ಯುತ್ ಪ್ರವಾಹಗಳು ಕಾಂತಕ್ಷೇತ್ರವನ್ನು ಉಂಟುಮಾಡುತ್ತವೆ. ಭೂಗರ್ಭಲ್ಲಿನ ಸಂವಹನ ಚಲನೆಗಳು ಸ್ವಾಭಾವಿಕವಾಗಿ ಅವ್ಯವಸ್ಥಿತವಾಗಿದ್ದು, ಮತ್ತೆ ಮತ್ತೆ ತಮ್ಮ ಹೊಂದಾಣಿಕೆಯನ್ನು ಬದಲಿಸಿಕೊಳ್ಳುತ್ತವೆ. ಇದರಿಂದ, ಸರಾಸರಿ ಪ್ರತಿ ಕೋಟಿ ವರ್ಷಗಳಲ್ಲಿ ಕೆಲವು ಬಾರಿಯಂತೆ ಅನಿಯತವಾಗಿ ಕಾಂತಕ್ಷೇತ್ರ ವಿಪರ್ಯಯಗಳು ಉಂಟಾಗುತ್ತವೆ. ಇತ್ತೀಚೆಗಿನ ವಿಪರ್ಯಯವು ಸುಮಾರು ೭೦೦,೦೦೦ ವರ್ಷಗಳು ಹಿಂದೆ ಆಯಿತು. [೧೮][೧೯] ಈ ಕಾಂತಕ್ಷೇತ್ರದಿಂದ ಸೃಷ್ಟಿಗೊಂಡ ಕಾಂತಗೋಳವು ಸೌರ ಮಾರುತದಲ್ಲಿನ ಕಣಗಳನ್ನು ಭೂಮಿಯಿಂದಾಚೆಗೆ ವಾಲಿಸುತ್ತದೆ. ಆಘಾತ ತರಂಗದ ಸೂರ್ಯನೆಡೆಗಿರುವ ತುದಿಯು ಭೂಮಿಯ ತ್ರಿಜ್ಯದ ಸುಮಾರು ೧೩ ಪಟ್ಟು ದೂರದಲ್ಲಿ ಸ್ಥಿತವಾಗಿದೆ. ಕಾಂತಕ್ಷೇತ್ರ ಮತ್ತು ಸೌರ ಮಾರುತಗಳ ಅಪ್ಪಳಿಕೆಯಿಂದ ವಾನ್ ಆಲನ್ ವಿಕಿರಣ ಪಟ್ಟಿಗಳೆಂದು ಕರೆಯಲಾಗುವ ಒಂದು ಜೋಡಿ ಏಕಕೇಂದ್ರೀಯ ಬಳೆಯಾಕಾರದ ಶಕ್ತಿಯುತ ಆವಿಷ್ಟಕಣಗಳ ವಲಯಗಳು ನಿರ್ಮಿತವಾಗುತ್ತವೆ. ಈ ಪ್ಲಾಸ್ಮವು ಕಾಂತ ಧ್ರುವಗಳ ಬಳಿ ಭೂಮಿಯ ವಾಯುಮಂಡಲವನ್ನು ಹೊಕ್ಕಾಗ ಧ್ರುವಾರುಣ ಜ್ಯೋತಿಯು ಉಂಟಾಗುತ್ತದೆ.[೨೦] [ಬದಲಾಯಿಸಿ] ಕಕ್ಷೆ ಮತ್ತು ಪರಿಭ್ರಮಣೆಹಿನ್ನೆಲೆ ನಕ್ಷತ್ರಗಳಿಗೆ ಸಾಪೇಕ್ಷವಾಗಿ, ತನ್ನ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳನ್ನು ಸೇರಿಸುವ ಅಕ್ಷದ ಸುತ್ತ ಒಂದು ಸುತ್ತು ಸುತ್ತಲು ಭೂಮಿಗೆ ಸರಾಸರಿ ೨೩ ಘಂಟೆಗಳು, ೫೬ ನಿಮಿಷಗಳು ಮತ್ತು ೪.೦೯೧ ಕ್ಷಣಗಳು ಹಿಡಿಯುತ್ತವೆ. ಈ ಅವಧಿಗೆ ನಾಕ್ಷತ್ರಿಕ ದಿನ ಎಂದು ಹೆಸರು.[೨೧] ಭೂಮಿಯಿಂದ ಕಂಡಂತೆ, ಅಂತರಿಕ್ಷದಲ್ಲಿ ಆಕಾಶಕಾಯಗಳ ಚಲನೆಯು ೧೫°/ಘಂ. = ೧೫’/ನಿ. ಪಶ್ಚಿಮದೆಡೆಗೆ ಇರುತ್ತದೆ. ಇದು ಪ್ರತಿ ಎರಡು ನಿಮಿಷಗಳಲ್ಲಿ ಸೂರ್ಯ ಅಥವಾ ಚಂದ್ರರ ಗೋಚರ ವ್ಯಾಸಕ್ಕೆ ಸಮಾನ. (ಸೂರ್ಯ ಮತ್ತು ಚಂದ್ರ ಗೋಚರ ಗಾತ್ರಗಳು ಸುಮಾರು ಒಂದೇ ಪ್ರಮಾಣದಲ್ಲಿವೆ.) ಭೂಮಿಯು ಸೂರ್ಯನನ್ನು ಸರಾಸರಿ ಸುಮಾರು ೧೫ ಕೋಟಿ ಕಿ.ಮೀ. (೯.೩೨ ಕೋಟಿ ಮೈಲಿ) ದೂರದಲ್ಲಿ ಪ್ರತಿ ೩೬೫.೨೫೬೪ ಸರಾಸರಿ ಸೌರ ದಿನಗಳಿಗೊಮ್ಮೆ (೧ ನಾಕ್ಷತ್ರಿಕ ವರ್ಷ) ಪರಿಭ್ರಮಿಸುತ್ತದೆ. ಹೀಗಾಗಿ, ಭೂಮಿಯಿಂದ ನಕ್ಷತ್ರಗಳಿಗೆ ಸಾಪೇಕ್ಷವಾಗಿ ಸೂರ್ಯನ ಗೋಚರ ಚಲನೆಯು ಸುಮಾರು ೧°/ದಿನ (ಅಥವಾ ಪ್ರತಿ ೧೨ಘಂಟೆಗಳಲ್ಲಿ ಸೂರ್ಯ/ಚಂದ್ರರ ವ್ಯಾಸದಷ್ಟು) ಪೂರ್ವದೆಡೆಗೆ ಇರುತ್ತದೆ. ಈ ಚಲನೆಯ ಕಾರಣದಿಂದ, ಸೂರ್ಯನು ಪುನಃ ಮಧ್ಯಾಹ್ನವೃತ್ತಕ್ಕೆ ಮರಳುವಷ್ಟು ತಿರುಗಲು ಭೂಮಿಗೆ ಸರಾಸರಿ ೨೪ಘಂಟೆಗಳು - ಒಂದು ಸೌರ ದಿನದಷ್ಟು ಕಾಲ ಹಿಡಿಯುತ್ತದೆ. ಭೂಮಿಯ ಕಕ್ಷೀಯ ವೇಗವು ಸರಾಸರಿ ಸುಮಾರು ೩೦ಕಿ.ಮೀ./ಘಂ.ನಷ್ಟಿದೆ. (೧೦೮,೦೦೦ಕಿ.ಮೀ./ಘಂ. ಅಥವಾ ೬೭,೦೦೦ಮಿ/ಘಂ.). ಈ ವೇಗದಲ್ಲಿ ಗ್ರಹದ ವ್ಯಾಸವನ್ನು ಸುಮಾರು ಏಳು ನಿಮಿಷಗಳಲ್ಲಿ ಮತ್ತು ಭೂಮಿ-ಚಂದ್ರರ ನಡುವಿನ ದೂರವನ್ನು ನಾಲ್ಕು ಘಂಟೆಗಳಲ್ಲಿ ಕ್ರಮಿಸಬಹುದು.[೨೨]
೬೦೦ ಕೋಟಿ ಕಿ.ಮೀ. (೪೦೦ ಕೋಟೀ ಮೈಲಿ) ಗಳಿಂದಾಚೆಯಿಂದ ವಾಯೇಜರ್ ೧ ಗಗನನೌಕೆಗೆ ಭೂಮಿಯು ಒಂದು ಸಣ್ಣ ಚುಕ್ಕೆಯಂತೆ ಕಂಡಿತು.
ಹಿನ್ನೆಲೆಯ ನಕ್ಷತ್ರಗಳಿಗೆ ಸಾಪೇಕ್ಷವಾಗಿ ಚಂದ್ರವು ಭೂಮಿಯೊಂದಿಗಿನ ಭಾರಕೇಂದ್ರದ ಸುತ್ತ ಪ್ರತಿ ೨೭.೩೨ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಸೂರ್ಯನ ಸುತ್ತ ಭೂಮಿ-ಚಂದ್ರ ವ್ಯವಸ್ಥೆಯ ಸಾಮಾನ್ಯ ಪರಿಭ್ರಮಣೆಯನ್ನು ಜೊತೆಗೂಡಿಸಿದರೆ, ಒಂದು ಹುಣ್ಣಿಮೆಯಿಂದ ಇನ್ನೊಂದಕ್ಕಿರುವ ಅವಧಿಯು ೨೯.೫೩ ದಿನಗಳು (ಯುತಿ ಮಾಸ). ಖಗೋಳದ ಉತ್ತರ ಧ್ರುವದಿಂದ ನೋಡಿದಾಗ, ಭೂಮಿ, ಚಂದ್ರರ ಚಲನೆ, ಮತ್ತವುಗಳ ಅಕ್ಷೀಯ ಪರಿಭ್ರಮಣಗಳೆಲ್ಲ ಅಪ್ರದಕ್ಷಿಣ ದಿಶೆಯಲ್ಲಿರುತ್ತವೆ. ಪರಿಭ್ರಮಣೀಯ ಮತ್ತು ಅಕ್ಷೀಯ ಸಮತಳಗಳು ನಿಖರವಾದ ಹೊಂದಾಣಿಕೆಯಲ್ಲಿಲ್ಲ: ಭೂಮಿಯ ಅಕ್ಷವು ಭೂಮಿ-ಸೂರ್ಯ ಸಮತಳದ ಲಂಬಕ್ಕೆ ಸುಮಾರು ೨೩.೫ ಡಿಗ್ರಿಗಳು ಓರೆಯಾಗಿದೆ (ಇದರಿಂದ ಋತುಗಳುಂಟಾಗುತ್ತವೆ); ಭೂಮಿ-ಚಂದ್ರ ಸಮತಳವು ಭೂಮಿ-ಸೂರ್ಯ ಸಮತಳಕ್ಕೆ ಸುಮಾರು ೫ ಡಿಗ್ರಿಗಳ ಓರೆಯಲ್ಲಿದೆ (ಈ ಓರೆಯಿಲ್ಲದಿದ್ದಿದ್ದರೆ, ಪ್ರತಿ ಎರಡು ವಾರಗಳಿಗೊಮ್ಮೆ ಪರ್ಯಾಯವಗ್ಗಿ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣಗಳುಂಟಾಗುತ್ತಿದ್ದವು).[೨೩][೨೨] ಭೂಮಿಯ ಅಕ್ಷೀಯ ಓರೆಯ ಕಾರಣದಿಂದ, ಬಾನಿನಲ್ಲಿ ಸೂರ್ಯನ ಸ್ಥಾನವು (ನೆಲದ ಮೇಲಿನ ವೀಕ್ಷಕರಿಗೆ ಕಂಡಂತೆ) ವರ್ಷದಲ್ಲಿನ ಋತು/ಮಾಸಗಳೊಂದಿಗೆ ಬದಲಾಗುತ್ತದೆ. ಉತ್ತರೀಯ ಅಕ್ಷಾಂಶದಲ್ಲಿರುವ ವೀಕ್ಷಕನೊಬ್ಬನಿಗೆ, ಉತ್ತರೀಯ ಧ್ರುವವು ಸೂರ್ಯನೆಡೆಗೆ ಬಾಗಿದ್ದಾಗ ದಿನವು ಹೆಚ್ಚು ದ | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||